ಯಕ್ಷಗಾನ ಕಲೆ ಸ್ಥಾಯಿಯಾಗಿ ಉಳಿಯಬೇಕು : ಕಮಲಾದೇವಿ ಪ್ರಸಾದ ಆಸ್ರಣ್ಣ
ಲೇಖಕರು : ಉದಯವಾಣಿ
ಮ೦ಗಳವಾರ, ಫೆಬ್ರವರಿ 23 , 2016
|
ಫೆಬ್ರವರಿ 23, 2016
|
ಯಕ್ಷಗಾನ ಕಲೆ ಸ್ಥಾಯಿಯಾಗಿ ಉಳಿಯಬೇಕು : ಕಮಲಾದೇವಿ ಪ್ರಸಾದ ಆಸ್ರಣ್ಣ
ಮಂಗಳೂರು :
ಯಕ್ಷಗಾನ ಕ್ಷೇತ್ರಕ್ಕೆ ವಿದ್ವಾಂಸರ ಪ್ರವೇಶವಾದ ಬಳಿಕ ಅದು ಕೇವಲ ಜನಪದೀಯ ಕಲೆಯಾಗಿ ಉಳಿಯದೇ ಶ್ರೀಮಂತ ಕಲೆಯಾಗಿ ಹೊರ ಹೊಮ್ಮಿತು. ಯಕ್ಷರಂಗದಲ್ಲಿ ಹೊಸತನ ಕಾಯ್ದುಕೊಳ್ಳುವುದರೊಂದಿಗೆ ಈ ಕಲೆ ಸ್ಥಾಯಿಯಾಗಿ ಉಳಿಯುವಲ್ಲಿ ಕಲಾವಿದರು, ಕಲಾ ರಸಿಕರು ಮತ್ತು ಸಂಘಟಕರು ಗುರುತರ ಪಾತ್ರ ವಹಿಸಬೇಕು ಎಂದು ಶ್ರೀ ಕ್ಷೇತ್ರ ಕಟೀಲಿನ ವಿದ್ವಾನ್ ಕಮಲಾದೇವಿ ಪ್ರಸಾದ ಆಸ್ರಣ್ಣ ಅವರು ಹೇಳಿದರು.
ನಗರದ ಎಸ್ಡಿಎಂ ಕಾನೂನು ಮಹಾವಿದ್ಯಾಲಯ ಮತ್ತು ಸ್ನಾತಕೋತ್ತರ ಅಧ್ಯಯನ ಹಾಗೂ ಸಂಶೋಧನ ಕೇಂದ್ರದ ವತಿಯಿಂದ ಎರಡು ದಿನ ಕಾಲ ನಡೆಯುವ "ಯಕ್ಷೋತ್ಸವ-ರಜತ ಸಂಭ್ರಮ-2016' ಅಂತರ್ ಕಾಲೇಜು ತೆಂಕುತಿಟ್ಟು ಯಕ್ಷಗಾನ ಸ್ಪರ್ಧೆಯನ್ನು ಅವರು ಸೋಮವಾರ ಉದ್ಘಾಟಿಸಿದರು.
ಯಕ್ಷಗಾನದಿಂದ ನಮ್ಮ ಕರಾವಳಿ ಕನ್ನಡ ನಾಡಿನ ಪ್ರಭಾವಳಿಯಾಗಿ ಪ್ರಕಾಶಿಸುತ್ತಿದೆ. ಈ ಕ್ಷೇತ್ರದಲ್ಲಿ ಪ್ರಸ್ತುತ ಹಲವು ಅಭಿವೃದ್ಧಿಗಳು ನಡೆಯುತ್ತಿವೆ. ಆದರೂ ಕಲೆಯ ಮೂಲ ಸ್ವರೂಪ ಕಾಯ್ದುಕೊಳ್ಳುವಲ್ಲಿ ಕಲಾವಿದರು, ಪ್ರೇಕ್ಷಕರ ಹೊಣೆಗಾರಿಕೆ ಮಹತ್ತರವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ವಿದ್ವಾಂಸ ಡಾ| ಪ್ರಭಾಕರ ಜೋಶಿ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಯಕ್ಷಗಾನ ಕಲಾವಿದ ಕುಂಬ್ಳೆ ಸುಂದರರಾವ್, ಪ್ರೊ| ಅರಳ ರಾಜೇಂದ್ರ ಶೆಟ್ಟಿ, ಬೆಳಪು ದೇವಿಪ್ರಸಾದ್ ಶೆಟ್ಟಿ ಮುಖ್ಯ ಅತಿಥಿಗಳಾಗಿದ್ದರು.
ಪ್ರಾಂಶುಪಾಲ ಡಾ| ತಾರಾನಾಥ್, ವಿದ್ಯಾರ್ಥಿ ಸಂಘದ ಅಧ್ಯಕ್ಷೆ ದಿವ್ಯಾ ರಾವ್, ಯಕ್ಷೋತ್ಸವ ವಿದ್ಯಾರ್ಥಿ ಸಂಚಾಲಕರಾದ ಸೋಹನ್ ಆಳ್ವ, ಜೀವನ್ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.
ಯಕ್ಷೋತ್ಸವ ಸಂಚಾಲಕ ಸಾಯಿನಾಥ್ ಮಲ್ಲಿಗೆಮಾಡು ಸ್ವಾಗತಿಸಿದರು. ನರೇಶ್ ಮಲ್ಲಿಗೆಮಾಡು ವಂದಿಸಿದರು. ರಕ್ಷಿತಾ ನಿರೂಪಿಸಿದರು.
ಕೃಪೆ :
udayavani
|
|
|